ಯುಗಾದಿ..........ಭಾಗ್ಯಶ್ರೀ ಕಂಬಳಕಟ್ಟ ರವರ ಕವನ
Friday, April 1, 2022
ಕವನದ ಶೀರ್ಷಿಕೆ: ಯುಗಾದಿ ಹಬ್ಬ
ಹೊಸ ಹರುಷ ತಂದಿದೆ ಯುಗಾದಿ ಹಬ್ಬ
ಬೇವು ಬೆಲ್ಲದ ಸವಿಯಾ ಮೆಲ್ಲೋ ಹಬ್ಬ ||
ಬಾಗಿಲಿಗೇ ಕಟ್ಟೋಣ ತಳಿರು ತೋರಣ
ಅಕ್ಷಯವಾಗಲಿ ಸಂತಸದ ವಾತಾವರಣ |
ಕಳೆದಿಹ ಕಹಿ ನೆನಪುಗಳ ಮರೆಯೋಣ
ಸಮಚಿತ್ತದಿ ಜೀವನವ ಮುನ್ನಡೆಸೋಣ ||
ಮನೆ ಮುಂದೆ ರಂಗೋಲಿಯ ಬಿಡಿಸುತ
ಹೊಸ ವರುಷಕೇ ಸ್ವಾಗತವಾ ಕೋರುತ |
ನವ ಉಡುಗೆಯ ಸಂಭ್ರಮದಿ ಧರಿಸುತ
ಖುಷಿಯ ಹಂಚೋಣ ನಾವು ಅನವರತ ||
ಹಿರಿಯರಿಗೆ ತಲೆಯ ಬಾಗಿ ನಮಿಸೋಣ
ಬಗೆ ಬಗೆಯ ಭಕ್ಷ್ಯ ಗಳನು ಸವಿಯೋಣ |
ಜೀವನವು ಸುಖ ದುಃಖಗಳ ಸಮ್ಮಿಶ್ರಣ
ಅರಿತು ಸಾಗಿಸೋಣ ಈ ಬಾಳ ಪಯಣ ||
✍️ ಭಾಗ್ಯಶ್ರೀ ಕಂಬಳಕಟ್ಟ, ಉಡುಪಿ.