
ಸಂಕ್ರಾಂತಿ ಯ ಬಗ್ಗೆ ಒಂದಿಷ್ಟು,...... ಪ್ರತಿಮಾ ಹೆಬ್ಬಾರ್
Thursday, January 13, 2022
ಸಂಕ್ರಾಂತಿ ಮತ್ತೆ ಬಂದಿದೆ.
ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು ಎಂಬುವುದು ಸಂಕ್ರಾಂತಿಯ ಘೋಷವಾಕ್ಯ. ಸಂಕ್ರಮಣ ಸಂಕ್ರಾಂತಿ ಎಂದರೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವುದು ಎಂದರ್ಥ.
ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಧಾನ್ಯಲಕ್ಷ್ಮಿ ಮನೆಗೆ ಬರುವ ಪರ್ವಕಾಲ. ಮಕರ ಸಂಕ್ರಾಂತಿಗೆ ಜ್ಯೋತಿಷ್ಯಶಾಸ್ತ್ರದ ತಳಹದಿಯು ಇದೆ .ಸೂರ್ಯನ ಉತ್ತರ ದಿಕ್ಕಿನ ಪ್ರಯಾಣವನ್ನು ಮಕರ ಸಂಕ್ರಾಂತಿ ಸೂಚಿಸುತ್ತದೆ.
ಗುಜರಾತಿನಲ್ಲಿ ಉತ್ತರಾಯಣ ತಮಿಳುನಾಡಿನಲ್ಲಿ ಪೊಂಗಲ್, ಹಿಮಾಚಲ ಹರಿಯಾಣ ಮತ್ತು ಪಂಜಾಬುಗಳಲ್ಲಿ ಮಾಘೀ, ಎಂದು ಆಸಾಮಿಗಳು ಬಿಹು ಎಂದೂ, ಕಾಶ್ಮೀರದಲ್ಲಿ ಶಿಶುರ್ ಸಂಕ್ರಾಂತಿ ಮತ್ತು ಕರ್ನಾಟಕದಲ್ಲಿ ಮಕರಸಂಕ್ರಾಂತಿ ಎಂದು ಆಚರಿಸುವ ಸುಂದರ ಪರ್ವ.
ಮಕರ ಸಂಕ್ರಾಂತಿಯ ಈ ದಿನ ದೇವರುಗಳು ಭೂಮಿಯ ಮೇಲೆ ಇಳಿದು ಗಂಗಾಸ್ನಾನ ಮಾಡುತ್ತಾರೆ ಎಂಬ ಪ್ರತೀತಿಯೂ ಇದೆ .ಆದುದರಿಂದ ಈ ದಿನ ಗಂಗಾಸ್ನಾನ ತುಂಬಾ ಪವಿತ್ರ ಪುರಾಣದ ಪ್ರಕಾರ ಮಕರ ಸಂಕ್ರಮಣ ಕಾಲದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ಪ್ರತೀತಿಯೂ ಇದೆ. ಇದಕ್ಕಾಗಿಯೇ ಮಹಾಭಾರತದಲ್ಲಿ ಭೀಷ್ಮನು ಶರಶೈಯ್ಯೆಯಲ್ಲಿ ಇದ್ದು ಮೋಕ್ಷ ಪ್ರಾಪ್ತಿಗಾಗಿ ಇದೇ ಸಮಯಕ್ಕಾಗಿ ಕಾಯುತ್ತಿದ್ದರು.
ಈ ಹಬ್ಬದಲ್ಲಿ ಗಾಳಿಪಟ ಹಾರಿಸುವುದು, ದೀಪೋತ್ಸವ, ಮೇಳಗಳು ನಡೆಯುತ್ತವೆ.
ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು ಎಂದು ಹೇಳುತ್ತಾ ಜನರು ಪರಸ್ಪರ ಎಳ್ಳು-ಬೆಲ್ಲ ಹಂಚುತ್ತಾರೆ .ಇದರ ಅರ್ಥ ಯಾವುದೇ ಹಳೆಯ ಕಹಿ ನೆನಪು ಹಾಗೂ ಅಸಮಾಧಾನವನ್ನು ಬಿಟ್ಟು ಪ್ರೀತಿ ಸೌಹಾರ್ದತೆಯಿಂದ ಪರಸ್ಪರ ಬಾಳಬಹುದಾಗಿದೆ. ವೈಜ್ಞಾನಿಕ ರೀತಿಯಲ್ಲಿ ನೋಡಿದಾಗ ಈ ಕಾಲದಲ್ಲಿ ಚಳಿ ಹೆಚ್ಚಾಗಿದ್ದು ಎಳ್ಳು ಸೇವನೆಯಿಂದ ದೇಹದ ಉಷ್ಣತೆ ಹೆಚ್ಚಿ ಚರ್ಮದ ಕಾಂತಿಯೂ ಹೆಚ್ಚುತ್ತದೆ.
ಮಕರ ಸಂಕ್ರಾಂತಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುವ ಹಬ್ಬ. ದೇಶದಾದ್ಯಂತ ಜನರು ಉತ್ಸಾಹದಿಂದ ಆಚರಿಸುವ ಹಬ್ಬ. ಸಂಕ್ರಾಂತಿಯ ಸುಗ್ಗಿ ಹಬ್ಬ.
ಸರ್ವರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.
****************************
ಪ್ರತಿಮಾ ಹೆಬ್ಬಾರ್
ಜಿಲ್ಲಾ ಉತ್ತಮ ಶಿಕ್ಷಕಿ ವಿಜೇತೆ
ಸರಕಾರಿ ಹಿರಿಯ ಕನ್ನಡ ಶಾಲೆ
ಬಗಂಬಿಲ
ಮಂಗಳೂರು