-->
ಜಯಲಕ್ಷ್ಮಿ ಯವರ ಬರಹ

ಜಯಲಕ್ಷ್ಮಿ ಯವರ ಬರಹ



ಜನವರಿ 24  "ರಾಷ್ಟೀಯ ಹೆಣ್ಣು ಮಕ್ಕಳ ದಿನ"

ಪ್ರತಿಯೊಬ್ಬ ವ್ಯಕ್ತಿಯ  ಹುಟ್ಟಿನ ಆರಂಭ ಹೆಣ್ಣಿನಿಂದ ..ಒಂಭತ್ತು ತಿಂಗಳು ಹೊತ್ತು ,ಹೆತ್ತು ,  ಕೈತುತ್ತು ತಿನಿಸುವವಳು ಹೆಣ್ಣು ...ಜೊತೆಯಾಗಿ ಕೈ ಹಿಡಿದು ಸಂಸಾರ ಸಾಗಿಸುವವಳು ಹೆಣ್ಣು...ಜೀವನದ ಯಶಸ್ಸಿನ  ಪ್ರತಿ ಮೆಟ್ಟಿಲಲ್ಲಿ ಹೆಜ್ಜೆಗೆ ಹೆಜ್ಜೆಯಿರಿಸಿ  ಗಂಡಿನೊಂದಿಗೆ  ಜೊತೆಯಾಗಿ ಸಾಗುವವಳು ಹೆಣ್ಣು...

ಹೆಣ್ಣು ಕುಟುಂಬದ ಕಣ್ಣು". ಎಂಬ ಮಾತೂ ಇದೆ...ಮನೆಯಲ್ಲಿ ಹೆಣ್ಣುಮಗು  ಹುಟ್ಟಿದಾಗ ಕನ್ಯಾದಾನ ಫಲ ಪ್ರಾಪ್ತಿಯಾಯ್ತು ಎಂಬುದಾಗಿ ಹಿರಿಯರು ಹೇಳುತ್ತಾರೆ.

ಹೆಣ್ಣುಮಗುವಿನ ಕಿಲಕಿಲ ನಗು, ಸೌಂದರ್ಯ, ಮಾತುಗಳು ಕಣ್ಣಿಗೂ, ಮನಸ್ಸಿಗೂ ಆನಂದವನ್ನು ನೀಡುತ್ತದೆ. ಹೆಣ್ಣುಮಕ್ಕಳು ಅಂದವಾದ ಬಟ್ಟೆಯನ್ನು ತೊಟ್ಟು ಮನೆಯಲ್ಲಿ ಆಕಡೆ  ಈಕಡೆ ಓಡಾಡುತ್ತಾ ಇದ್ದರೆ ಅದನ್ನು ನೋಡುವುದೇ ಒಂದು ಚೆಂದ...

ಹಿಂದಿನ ಕಾಲದಲ್ಲಿ ಹೆಣ್ಣು ಮಗು ಹುಟ್ಟಿದರೆ ಹೆಣ್ಣು ಹುಟ್ಟಿತೆಂದು ಮೂದಲಿಸುತ್ತಿದ್ದರು ಜನ... ಏಷ್ಟೋ ಮಂದಿ ತಮ್ಮ  ಪತ್ನಿಯರಿಗೆ ಚಿತ್ರಹಿಂಸೆ ನೀಡಿ ಅದೇಷ್ಟೋ ಸಂಸಾರಗಳು ಬೇರೆಬೇರೆಯಾಗಿದ್ದದನ್ನು ಕೇಳಿದ್ದೇವೆ... ಹೆಣ್ಣಾಗಲಿ ಗಂಡಾಗಲಿ ಅದು ಪ್ರಕೃತಿಯ ವರ..... 

ಆಧುನಿಕತೆ ,ತಂತ್ರಜ್ಞಾನ ,ವಿಜ್ಞಾನ ಎಷ್ಟೇ ಬೆಳೆದರೂ  ಈ ಪಿತೃ ಪ್ರಧಾನ ಸಮಾಜದಲ್ಲಿ   ಇಂದಿಗೂ ಕೂಡ ಹೆಣ್ಣುಮಕ್ಕಳು ಗಂಡಿಗಿಂತ ಕೀಳು ಎಂಬ ಮನೋಭಾವನೆಯನ್ನು ಹೊಂದಿರುವುದು ಕಂಡುಬರುತ್ತದೆ..

ಈ ರೀತಿಯ ಲಿಂಗ ತಾರತಮ್ಯತೆ ಯನ್ನು ಹೋಗಲಾಡಿಸಿ ಹೆಣ್ಣು-ಗಂಡು ಸಮಾನ ಎಂಬ ಭಾವನೆಯನ್ನು ಸಮಾಜದಲ್ಲಿ ಮೂಡಿಸುವುದಕ್ಕಾಗಿ ಜನವರಿ 24 ನ್ನು " ಹೆಣ್ಣುಮಕ್ಕಳ ದಿನ" ವನ್ನಾಗಿ ದೇಶದೆಲ್ಲೆಡೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ... ಈ ದಿನದ ಮಹತ್ವವನ್ನು ತಿಳಿಸುವ ಕಾರ್ಯವನ್ನು ಮಾಡಲಾಗುತ್ತದೆ.

ಕಾನೂನಿನ ಮುಂದೆ ಗಂಡು ಹೆಣ್ಣು ಇಬ್ಬರೂ ಸಮಾನರು ಎಂಬ ಅರಿವನ್ನು ಪ್ರತಿಯೊಬ್ಬರಲ್ಲೂ ಮೂಡಿಸಲಾಗುತ್ತದೆ..

"ಬೇಟಿ ಪಡಾವೋ..ಬೇಟಿ ಬಚಾವೋ.. " ಯೋಜನೆಯಂತೆ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಒತ್ತು ನೀದುವ ಯೋಜನೆಗಳ ಬಗ್ಗೆ ಅರಿವು  ಮೂಡಿಸಲಾಗುತ್ತದೆ... 

ಹೆಣ್ಣುಮಕ್ಕಳ ಲಿಂಗಾನುಪಾತ ಸಂಖ್ಯೆ ಇತ್ತೀಚೆಗೆ ಕಡಿಮೆಯಾಗುತ್ತಿದ್ದು ಇದು ಮುಂದೆ ಅಸಮತೋಲನಕ್ಕೆ ನಾಂದಿಯಾಗುವ ಸಾಧ್ಯತೆಗಳ ಬಗ್ಗೆ ತಿಳುವಳಿಕೆ ಮೂಡಿಸಲಾಗುತ್ತದೆ...

ಹೆಣ್ಣು ಮಕ್ಕಳ ಶಿಕ್ಷಣ,  ಹೆಣ್ಣು ಮಕ್ಕಳ ಕಾಳಜಿ ,ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತದೆ..

 ಹೆಣ್ಣುಮಕ್ಕಳ ವಿರುದ್ಧ ನಡೆಯುವ ಶೋಷಣೆ, ಲೈಂಗಿಕ ಕಿರುಕುಳ,  ಹೆಣ್ಣು ಭ್ರೂಣ ಹತ್ಯೆ , ಬಾಲ್ಯ ವಿವಾಹ , ಲಿಂಗ ಅಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ...

"ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಃ...." (ಎಲ್ಲಿ ಸ್ತ್ರೀಗೆ ಪೂಜ್ಯ ಸ್ಥಾನ ಸಿಗುವುದು ಅಲ್ಲಿ ದೇವತೆಗಳು ನೆಲೆಸುತ್ತಾರೆ) ಎಂಬ ಮಾತಿನಂತೆ ಪ್ರತಿಯೊಬ್ಬ ಹೆಣ್ಣಿನ  ಗೌರವವನ್ನು ಕಾಪಾಡಬೇಕು. ಹೆಣ್ಣಿಗೆ ಸಿಗಬೇಕಾದ ಹಕ್ಕನ್ನು ಎತ್ತಿ ಹಿಡಿಯಬೇಕು..

"ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ" ..ಹೆಣ್ಣು ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡುವುದರ ಜೊತೆಗೆ ಹೆಣ್ಣುಮಕ್ಕಳ ಸಬಲೀಕರಣವನ್ನು ಮಾಡುವ ಮೂಲಕ  ಲಿಂಗ ಅಸಮಾನತೆಯನ್ನು ಹೋಗಲಾಡಿಸಿ ಹೆಣ್ಣು ಮಕ್ಕಳಲ್ಲಿ ಸ್ವಾಭಿಮಾನ ,ಉಲ್ಲಾಸ ,ಆತ್ಮಾಭಿಮಾನವನ್ನು ಬೆಳೆಸುವ ಸಂಕಲ್ಪದೊಂದಿಗೆ ಹೆಣ್ಣುಮಕ್ಕಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಾ ಉತ್ತಮ ಸಮಾಜವನ್ನು ಕಟ್ಟೋಣ.

.ಹೆಣ್ಣು ಮಕ್ಕಳ ದಿನದ  ಆಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಈ ದಿನದ  ಆಚರಣೆಯ ಉದ್ದೇಶವು ಸಾರ್ಥಕವಾಗಬೇಕು ....

ಪ್ರತಿದಿನವೂ ಹೆಣ್ಣು ಮಗುವಿಗೆ ಬೆಳಕಿನ ಹಬ್ಬವಾಗಬೇಕೆಂಬುದೇ ನಮ್ಮ ಆಶಯ....


 ಜಯಲಕ್ಷ್ಮಿ ಜಿ ಕುಂಪಲ ಮಂಗಳೂರು

Ads on article

Advertise in articles 1

advertising articles 2

Advertise under the article